ಕಿತ್ತನಾರು

ಅರ್ಟಿಕೇಸೀ ಕುಟುಂಬಕ್ಕೆ ಸೇರಿದ ಬೊಮೀರಿಯ ಎಂಬ ವೈಜ್ಞಾನಿಕ ಹೆಸರಿನ ಒಂದು ಜಾತಿಯ ಸಸ್ಯ. ಈ ಜಾತಿಯಲ್ಲಿ ಸುಮಾರು 75 ಪ್ರಭೇದಗಳಿವೆ. ಭಾರತದಲ್ಲಿ 10 ಪ್ರಭೇದಗಳು ಬೆಳೆಯುತ್ತವೆ. ಇವುಗಳಲ್ಲೆಲ್ಲ ಬಹಳ ಸಾಮಾನ್ಯವಾದವೂ ಮುಖ್ಯವಾದವೂ ಇಂತಿವೆ- ಬೊಮೀರಿಯ ನೀವಿಯ, ಬೊ.ಮ್ಯಾಕ್ರೊಫಿಲ ಮತ್ತು ಬೊ.ಮಲಬಾರಿಕ. ನೀವಿಯ ಪ್ರಭೇದ ಅತ್ಯಂತ ಮುಖ್ಯವಾದುದು. ಇದನ್ನು ಚೀನದಲ್ಲೂ ಬೆಳೆಸುತ್ತಾರೆ. ಅಲ್ಲಿ ಇದಕ್ಕೆ ಚೀನಹುಲ್ಲು ಎಂಬ ಹೆಸರಿದೆ.

 ಕಿತ್ತನಾರಿನ ಎಲ್ಲ ಪ್ರಭೇದಗಳೂ ಮೂಲಿಕೆ ಅಥವಾ ಪೊದೆ ಸಸ್ಯರೂಪದ ಬಹುವಾರ್ಷಿಕ ಗಿಡಗಳು. ಈ ಸಸ್ಯವನ್ನು ಬೀಜದ ಅಥವಾ ಬೇರು ಮತ್ತು ಕಾಂಡ 10 ತಿಂಗಳುಗಳಲ್ಲಿ ಬಲಿಯುತ್ತದೆ. ಕಾಂಡದ ಬಣ್ಣ ಎಳೆಯದಿದ್ದಾಗ ಹಸಿರಾಗಿದ್ದು ಬಲಿತಂತೆ ಕಂದುಬಣ್ಣಕ್ಕೆ ತಿರುಗುತ್ತದೆ.

 ಇದರ ಕಾಂಡದ ಒಳತೊಗಟೆಯಿಂದ ಉತ್ತಮ ದರ್ಜೆಯ ನಾರು ದೊರೆಯುತ್ತದೆ. ಇದು ಸಸ್ಯ ನಾರುಗಳಲ್ಲಿಯೇ ಅತ್ಯಂತ ಉದ್ದವು (1-5 ಮೀ.)ಬಾಳಿಕೆ ಬರುವಂಥದೂ ರೇಷ್ಮೆಯಂತೆ ಹೊಳಪು ಮತ್ತು ಮೃದುವಾದದ್ದೂ ಆಗಿರುತ್ತದೆ. ಆದರೆ ಎಳೆಗಳಿಗೆ ಸ್ಥಿತಿಸ್ಥಾಪಕಗುಣವಿಲ್ಲ. ಬೇಕಾದ ಹಾಗೆ ಮಣಿಸಲೂ ಬರುವುದಿಲ್ಲ. ಈ ನಾರು ವಾಯುಗುಣದ ವೈಪರೀತ್ಯ, ರಾಸಾಯನಿಕ ವಸ್ತುಗಳು, ಸಮುದ್ರದ ನೀರು ಮುಂತಾದವುಗಳಿಂದ ಏನೂ ಧಕ್ಕೆಗೊಳ್ಳುವುದಿಲ್ಲ. ಆದ್ದರಿಂದಲೇ ಇದು ನೀರಿನಲ್ಲಿ ನೆನೆಸಿದಾಗ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ನಾರನ್ನು ಹತ್ತಿ, ಉಣ್ಣೆ ಅಗಸೆನಾರುಗಳಿಗೆ ಬದಲಿ ವಸ್ತುವಾಗಿಯೂ ಸುಕ್ಕದ ಮತ್ತು ಕೊಳೆಯದ ಬಟ್ಟೆಗಳ ತಯಾರಿಕೆಗೂ ಬಳಸುತ್ತಾರೆ. ಜಮಖಾನೆಗಳೂ, ಗ್ಯಾಸ್ ಮ್ಯಾಂಟಲ್‍ಗಳೂ, ಜರಿ ಮತ್ತು ಕರೆನ್ಸಿ ಹಾಳೆಗಳ ತಯಾರಿಕೆಗಳಿಗೆ ಇದರ ಬಳಕೆ ಹೆಚ್ಚು. ಅಸ್ಸಾಂ ಮತ್ತು ಬಂಗಾಳದಲ್ಲಿ ಇದನ್ನು ಒಂದು ವಿಶಿಷ್ಟ ಬಟ್ಟೆಯ (ಗ್ಲಾಸ್ ಕ್ಲಾತ್) ತಯಾರಿಕೆಗೂ ಬಳಸುತ್ತಾರೆ.

 ಗಿಡ ಬಲಿಯುವ ಹಾಗೂ ಹೂಬಿಡುವ ಮುನ್ನವೇ ಕಾಂಡವನ್ನು ಕತ್ತರಿಸಿ ಅದರಿಂದ ನಾರನ್ನು ತೆಗೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಭೇದಗಳಿಂದಲೂ ನಾರನ್ನು ತೆಗೆಯಬಹುದು. ಆದರೆ ನಾರು ತೆಗೆಯುವುದು ಬಹಳ ಕಷ್ಟ. ಅಲ್ಲದೇ ಇದಕ್ಕೆ ಹೆಚ್ಚು ವೆಚ್ಚ ತಗಲುವುದರಿಂದ, ನೇರವಾಗಿ ನೇಯ್ಗೆ ಕೈಗಾರಿಕೆಯಲ್ಲಿ ಉಪಯೋಗಿಸುವಷ್ಟು ಹೆಚ್ಚು ಪ್ರಾಮಾಣದಲ್ಲಿ ನಾರನ್ನು ತೆಗೆಯಲಾಗುವುದಿಲ್ಲ. ಉಣ್ಣೆ, ರೇಷ್ಮೆ, ಹತ್ತಿ, ಜೊತೆ ನೇಯ್ಗೆ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ.

 ಕಿತ್ತನಾರನ್ನು ಚೀನ, ಜಪಾನ್, ಜಾವ, ಫಾರ್ಮೋಸಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಭಾರತದಲ್ಲಿ ಹಿಮಾಲಯದ ತಪ್ಪಲು ಪ್ರದೇಶ, ಅಸ್ಸಾಂ ಮತ್ತು ಬಂಗಾಲಗಳಲ್ಲಿ ವಿಶೇಷವಾಗಿ ಬೆಳೆಸಲಾಗುತ್ತಿದೆ.

(ಬಿ.ಪಿ.)

(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ